ವಟಸಾವಿತ್ರಿ ವ್ರತಾರಂಭ

ಪತ್ನಿಯು ತನ್ನ ಪತಿಯ ಆಯುಷ್ಯ ವೃದ್ಧಿಗಾಗಿ ಆಚರಿಸುವ ವೃತವೇ ಈ 'ವಟ ಸಾವಿತ್ರಿ ವ್ರತ'. ಈ ವ್ರತವನ್ನು ಗುಜರಾತ್‌, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಇನ್ನೂ ಹೆಚ್ಚಿನ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಈ ವ್ರತವು ಸತ್ಯವಾನ್‌ ಸಾವಿತ್ರಿಯನ್ನು ನೆನೆದು ಆಚರಿಸಲಾಗುತ್ತದೆ. ಒಮ್ಮೆ ಸಾವಿತ್ರಿಯು ತನ್ನ ಪತಿ ಸತ್ಯವಾನ್‌ನ್ನು ಯಮನಿಂದ ಉಳಿಸಿಕೊಳ್ಳಲು ಈ ವ್ರತವನ್ನು ಆಚರಿಸುತ್ತಾಳೆ. ಇದರಿಂದ ಯಮನು ಸಂತಸಗೊಂಡು ಸತ್ಯವಾನ್‌ನ್ನು ಆಕೆಗೆ ಒಪ್ಪಿಸಿದ್ದಾನೆಂಬ ನಂಬಿಕೆಯಿದೆ. ಈ ದಿನ ಮಹಿಳೆಯರು ಆಲದ ಮರವನ್ನು ಪೂಜಿಸಿ, ಆಲದ ಮರಕ್ಕೆ ಪ್ರದಕ್ಷಿಣೆಯನ್ನು ಹಾಕುತ್ತಾರೆ. ವಟ ಸಾವಿತ್ರಿ ವ್ರತವು ಮೇ 22 ರ ಶುಕ್ರವಾರದಂದು ಆಚರಿಸಲಾಗುತ್ತಿದ್ದು, ಈ ಬಾರಿಯ ಶನಿ ಜಯಂತಿಯನ್ನು ಕೂಡ ಇದೇ ದಿನ ಆಚರಿಸಲಾಗುತ್ತದೆ. ಅಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪಾರ್ಥಿಸುತ್ತಾರೆ.ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯವನ್ನು ಒಪ್ಪಿಸಬೇಕು ಮತ್ತು ಉಪವಾಸ ಮಾಡುವುದಾಗಿ ನಿರ್ಧರಿಸಬೇಕು. ನಂತರ ಹೊಸ ಬಟ್ಟೆಯನ್ನು ತೊಟ್ಟು, ಹಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಮುಡಿಗೆ ಹೂ ಮುಡಿದು ಮದುವೆಯಾದ ಮಹಿಳೆ ಹೇಗಿರಬೇಕೋ ಹಾಗೇ ಅಲಂಕಾರ ಮಾಡಿಕೊಳ್ಳಬೇಕು. ನಂತರ ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ವಟ ಮರ ಅಥವಾ ಆಲದ ಮರದ ಕೆಳಗೆ ಇಡಬೇಕು. ಆದರೆ ಪೂಜೆಯ ವಸ್ತುಗಳನ್ನು ಆಲದ ಮರದ ಕೆಳಗೆ ಇಡುವ ಮುನ್ನ ಮರದ ಸುತ್ತಮುತ್ತಲೂ ಶುದ್ಧ ಮಾಡಬೇಕು. ಶುದ್ಧವಾದ ನಂತರ ಪೂಜೆಯ ಸಾಮಾಗ್ರಿಗಳನ್ನು ಆ ಸ್ಥಳದಲ್ಲಿಟ್ಟು ಸತ್ಯವಾನ್‌ ಸಾವಿತ್ರಿಯ ವಿಗ್ರಹವನ್ನು ಸ್ಥಾಪಿಸಿ ಆ ವಿಗ್ರಹಕ್ಕೆ, ಧೂಪ, ದೀಪ, ಅರಶಿಣ - ಕುಂಕುಮ, ನೆನೆಸಿದ ಕಡಲೆಕಾಳು, ಮಾಂಗಲ್ಯ ಸೂತ್ರ,  ಹೂವುಗಳನ್ನು ಅರ್ಪಿಸಿ ಪೂಜಿಸಬೇಕು. ಪೂಜೆ ಮುಗಿದ ನಂತರ ಆಲದ ಮರಕ್ಕೆ ದಾರದಿಂದ 5, 11, 21, 51 ಅಥವಾ 108 ಬಾರಿ ಸುತ್ತಬೇಕು. ಇದರೊಂದಿಗೆ ತಾಮ್ರದ ನಾಣ್ಯ ಅಥವಾ ಯಾವುದೇ ರೀತಿಯ ನಾಣ್ಯವನ್ನು ಇಡಬೇಕು.ಪ್ರಾಚೀನ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಯು ಮಕ್ಕಳಿಲ್ಲದ ಸಮಸ್ಯೆಯಿಂದ ಬೇಸರಕ್ಕೆ ಒಳಗಾಗಿದ್ದನು. ರಾಜ ತಾನು ಮಕ್ಕಳನ್ನು ಹೇಗಾದರೂ ಪಡೆಯಲೇಬೇಕೆಂದು ಸಾವಿತ್ರಿ ದೇವಿಯ ಕಠಿಣ ಯಜ್ಞ ಮತ್ತು ಪೂಜೆಯನ್ನು ಮಾಡುವಲ್ಲಿ ತೊಡಗಿದನು. ಈತನ ಕಠಿಣ ಪೂಜೆಯಿಂದ ಈತನಿಗೆ ಹೆಣ್ಣು ಮಗುವೊಂದು ಪ್ರಾಪ್ತಿಯಾಗುತ್ತದೆ. ಆ ಮಗು ತುಂಬಾನೇ ರೂಪವತಿಯಾಗಿತ್ತು. ಸಾವಿತ್ರಿ ದೇವಿಯ ಪೂಜೆಯಿಂದ ಹುಟ್ಟಿದ ಮಗುವಾದ್ದರಿಂದ ರಾಜನು ಆ ಮಗುವಿಗೆ ಸಾವಿತ್ರಿ ಎಂದು ನಾಮಕರಣ ಮಾಡುತ್ತಾನೆ.ಸಾವಿತ್ರಿಯು ಚಿಕ್ಕ ವಯಸ್ಸಿನವಳಿದ್ದಾಗಲೇ ಸಾಲ್ವ ದೇಶದ ರಾಜನ ಮಗನಾದ ಸತ್ಯವಾನ್‌ನ್ನು ಪ್ರೀತಿಸುತ್ತಾಳೆ. ಅದೇ ಸಮಯದಲ್ಲಿ ಸತ್ಯವಾನ್‌ಗೂ ಕೂಡ ಸಾವಿತ್ರಿಯ ಮೇಲೆ ಮನಸಾಗಿರುತ್ತದೆ. ಸಾವಿತ್ರಿ ಚಿಕ್ಕವಳಿದ್ದಾಗಲೇ ಒಂದು ದಿನ ಅಶ್ವಪತಿಯು ತನ್ನ ಮಂತ್ರಿಗಳಲ್ಲಿ ಮಗಳಿಗೊಂದು ವರನನ್ನು ಹುಡುಕಿ ತರುವಂತೆ ಆದೇಶಿಸುತ್ತಾನೆ. ಆ ಸಂದರ್ಭದಲ್ಲಿ ಸಾವಿತ್ರಿಯು ಸತ್ಯವಾನ್‌ನ್ನೇ ವರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಗ ನಾರದ ಮಹರ್ಷಿಗಳು ಈತನನ್ನು ಮದುವೆಯಾದರೆ ಕೇವಲ 12 ವರ್ಷಗಳ ನಂತರ ಈತ ಮರಣ ಹೊಂದುತ್ತಾನೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಸತ್ಯವಾನ್‌ ತನ್ನ ಮಗಳಿಗೆ ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ಆದರೆ ಸಾವಿತ್ರಿ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನ್‌ ನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸಿದಳು.ನಾರದರಿಂದ ಸತ್ಯವಾನ್‌ ನ ಸಾವಿನ ವಿಷಯ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬರುತ್ತಾಳೆ. ತನ್ನ ಪತಿ ಸತ್ಯವಾನ್‌ ನ್ನು ಯಮರಾಜ ಕರೆದುಕೊಂಡು ಹೋಗಲು ಬಂದಾಗಲೇ ಸಾವಿತ್ರಿ ಕೂಡ ಯಮನನ್ನು ಹಿಂಬಾಲಿಸಿಕೊಂಡೇ ಹೋಗಿದ್ದಳು. ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ಆಕೆಯಲ್ಲಿ ನಿನಗೆ ಯಾವ ವರಬೇಕು ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿಯು ಮೊದಲು ತನ್ನ ಅತ್ತೆಗೆ ಕಣ್ಣುಗಳನ್ನು ಕರುಣಿಸು ತದನಂತರ ತನ್ನ ಗಂಡನಿಗೆ ದೀರ್ಘಾಯುಷ್ಯವನ್ನು ನೀಡೆಂದು ಕೇಳಿಕೊಳ್ಳುತ್ತಾಳೆ.ಸಾವಿತ್ರಿ ತನ್ನ ಜಾಣ್ಮೆಯಿಂದ ಯಮನಲ್ಲಿ ಕೇಳಿದ ವರವನ್ನು ಯಮನು ಕರುಣಿಸಲೇ ಬೇಕಾಗಿತ್ತು. ಹಾಗಾಗಿ ಸಾವಿತ್ರಿಯ ವರದ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಯಮರಾಜನು ಸಾವಿತ್ರಿಯ ಪತಿ ಸತ್ಯವಾನ್‌ನ ಜೀವವನ್ನು ಕಡಲೆಕಾಳಿನ ರೂಪದಲ್ಲಿ ಪುನಃ ಆಕೆಗೆ ನೀಡುತ್ತಾನೆ. ಆದ್ದರಿಂದ ವಟ ಸಾವಿತ್ರಿ ಪೂಜೆಯನ್ನು ಮಾಡುವಾಗ ನೆನೆಸಿದ ಕಡಲೆಕಾಳನ್ನು ಅರ್ಪಿಸಲಾಗುತ್ತದೆ.