ರಾಮಾನುಜಾಚಾರ್ಯ ಜಯಂತಿ

ಜ್ಞಾನ ಭಕ್ತಿ ಸಮನ್ವಯದ ವೇದಾಂತಿ

ಇಂದು ರಾಮಾನುಜ ಜಯಂತಿ. ರಾಮಾನುಜರು  ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು ಮತ್ತು ಅಲ್ಲಿ ಜಾತಿ, ಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಂದಾಗಿ ಕಂಡರು. ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು.

ಹನ್ನೊಂದನೇ ಶತಮಾನದಲ್ಲಿ ಜನಿಸಿದ ರಾಮಾನುಜಾಚಾರ್ಯರು ಭಾರತೀಯ (ಹಿಂದೂ) ತತ್ತ್ವಜ್ಞಾನಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು. ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಪ್ರವರ್ತಕರಾಗಿ ಗುರುತಿಸಲ್ಪಡುವ ರಾಮಾನುಜಾಚಾರ್ಯರು, ಭಕ್ತಿ ಚಳವಳಿಗೆ ಪ್ರೇರೇಪಣೆ ನೀಡಿದ ‘ವಿಶಿಷ್ಟಾದ್ವೈತ’ವನ್ನು ಪ್ರಚುರಪಡಿಸಿದರು. ರಾಮಾನುಜಾಚಾರ್ಯರ ಜೀವನವೂ ಬಹಳ ವಿಶಿಷ್ಟ. ಶ್ರೀರಂಗಂನಿಂದ ಮಧುರೈಗೆ ಬಂದ ಅವರನ್ನು ಕೊನೆಗೂ ಗೋಷ್ಟಿಪೂರ್ಣರು ಅವರನ್ನು ಶಿಷ್ಯರನ್ನಾಗಿ ಒಪ್ಪಿಕೊಂಡು, ‘ಅಷ್ಟಾಕ್ಷರಿ ಮಂತ್ರ’ ದೀಕ್ಷೆ ನಿಡಿದರು.

ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು. ಮತ್ತು ಅಲ್ಲಿ ಜಾತಿ ಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರು. ರಾಮಾನುಜರ ಈ ನಡೆ ಅತ್ಯಂತ ಕ್ರಾಂತಿಕಾರಕ ನಡೆ. ರಾಮಾನುಜರು ಭಕ್ತಿಯ ಪರಾಕಾಷ್ಠೆಯ ಆ ಔನ್ನತ್ಯವನ್ನು ತಲುಪಿದ್ದರು. ಸದಾ ಒಂದು ಊರು ಬಿಟ್ಟು ಮತ್ತೊಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ – ಹೀಗೆ ಸಂಚರಿಸುತ್ತಲೇ ಇರುತ್ತಿದ್ದರು.

ಸಂಸಾರವನ್ನು ಬಹಳ ಹಿಂದೆಯೇ ತೊರಿದ್ದ ರಾಮಾನುಜರು ಗುರು ಮಹಾಪೂರ್ಣರಿಂದ ತಮ್ಮ ಮೂವತ್ತನೇ ವಯಸ್ಸಿನಲ್ಲಿ ದೀಕ್ಷೆ ಪಡೆದರು. ನಮ್ಮ ಕನ್ನಡ ನಾಡಿನ ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯಾಗಿ ‘ರಾಮಪ್ರಿಯ’ನನ್ನೂ ತಂದು ವೈರಮುಡಿ ಉತ್ಸವಕ್ಕೆ ಚಾಲನೆ ನೀಡಿದರು. ಹೊಯ್ಸಳ ದೊರೆ ಬಿಟ್ಟಿದೇವನಿಗೆ ಶ್ರೀವೈಷ್ಣವ ದೀಕ್ಷೆಯನ್ನಿತ್ತು, ಆತನನ್ನು ‘ವಿಷ್ಣುವರ್ಧನ’ ಎಂದು ಕರೆದರು. ಅವನಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿದರು. ಹೀಗೆ ರಾಮಾನುಜರು ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದಲ್ಲೆಲ್ಲಾ ಸಂಚರಿಸಿದರು.

ಶ್ರೀ ರಾಮಾನುಜಾಚಾರ್ಯರ ವೇದಗಳ ಅರ್ಥ ಮತ್ತು ಸಾರವನ್ನೊಳಗೊಂಡ ವೇದಾರ್ಥ ಸಂಗ್ರಹ,  ಭಗವದ್ಗೀತೆಯ ಟೀಕೆ ಮತ್ತು ವ್ಯಾಖ್ಯಾನವನ್ನೊಳಗೊಂಡ ‘ಭಗವದ್ಗೀತಾ ಭಾಷ್ಯ’ ಹಾಗೂ ಬ್ರಹ್ಮ ಸೂತ್ರಗಳಿಗೆ ವ್ಯಾಖ್ಯಾನವಾಗಿರುವ ‘ಶ್ರೀ ಭಾಷ್ಯ’ –   ಇವು ಹೆಚ್ಚು ಜನಪ್ರಿಯವಾಗಿವೆ.

ವಿಶಿಷ್ಟಾದ್ವೈತ ಮತ್ತು ರಾಮಾನುಜರ ಉಪದೇಶ

“ಈಶ್ವರನದು ಶುದ್ಧ ಸತ್ವ ಗುಣ. ಪ್ರಳಯದಲ್ಲಿ ಜೀವ, ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಅವನದು ಶುದ್ಧ ಸತ್ವಗುಣ. ಪ್ರಳಯ ಕಾಲದಲ್ಲಿ ಜೀವ -ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಜಗತ್ತು ವ್ಯಕ್ತವಾದಾಗ ಕರ್ಮಾನುಸಾರವಾಗಿ ದೇಹಗಳು ಒದಗುತ್ತವೆ” ಎನ್ನುವುದು ವಿಶಿಷ್ಟಾದ್ವೈತದ ಪ್ರತಿಪಾದನೆ. “ಶ್ರೀ ಲಕ್ಷ್ಮೀನಾರಾಯಣನೇ ಪರತತ್ತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನೂ ಪಡೆಯಲು ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲಿದೆ ಬೇರೆ ಗತಿ ಇಲ್ಲ” – ಇದು ರಾಮಾನುಜರ ಉಪದೇಶ ಸಾರ.