ವೈರಮುಡಿ ಬ್ರಹ್ಮೋತ್ಸವ

ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಇದು ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು (ಇನ್ನುಳಿದವು ಶ್ರೀರಂಗಂ, ತಿರುಪತಿ, ಕಂಚಿ).

ಇಂಥ ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹತ್ತು ದಿನ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಇದು ಕರ್ನಾಟಕದ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದು. ಅಷ್ಟೇ ಅಲ್ಲ, ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ಇಲ್ಲಿನ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಅತ್ಯದ್ಭುತ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ. ಒಂದು ರೀತಿ ಆಭರಣಗಳ ಹೆಸರಿನಲ್ಲಿ ನಡೆಯುವ ವೈರಮುಡಿ ಉತ್ಸವವೇ ಹಾಗೆ; ಬಹು ವೈಭವೋಪೇತ, ಹಾಗಾಗಿ ಇದು ಜಗತ್ಪ್ರಸಿದ್ಧ

ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣವಾದ ಒಂದು ಕಿರೀಟ. ಆದರೆ ಅಂತಿಂಥದ್ದಲ್ಲ, ದೈವಶಕ್ತಿಯ ಮಹಾಮಹಿಮೆಯ ಕಿರೀಟವಿದು. ಇದರ ಹಿಂದೊಂದು ಪೌರಾಣಿಕ ಕಥೆಯುಂಟು.

 ಸಮದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ.

ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.

ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು ಗಂಟೆಯಿಂದ ಬೆಳಗಿನ ಜಾವ ಗಂಟೆವರೆಗೂ ಜರುಗುತ್ತದೆ.

ಕಣ್ಣು ಕೋರೈಸುವ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.