ಕೊಲ್ಲೂರು ಮೂಕಾಂಬಿಕಾ ರಥ

ತುಳು ನಾಡಿನ ಸಪ್ತಕ್ಷೇತ್ರಗಳಲ್ಲಿ ಕೊಲ್ಲೂರು ಮುಖ್ಯವಾದದ್ದು. ಈಶಾನ್ಯ ಗಡಿಯ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಸುಂದರವಾದ ಗ್ರಾಮ ಇದು. ಕೊಲ್ಲೂರಿಗೆ ಮೂಕಾಂಬಿಕಾ ಪುರ ಎನ್ನುವ ಹೆಸರು ಕೂಡ ಇದೆ.ಇಲ್ಲಿರುವ ದೇವಿಯು ಲಕ್ಷ್ಮಿ, ಸರಸ್ವತಿ, ಶಕ್ತಿ ಹೀಗೆ ತ್ರಿಮಾತೆಯರ ಮೂರ್ತರೂಪದ ಎಂದು ಕರೆಸಿಕೊಳ್ಳುವುದರಿಂದ ಇದನ್ನು ಮಹಾಶಕ್ತಿಕ್ಷೇತ್ರ ಎಂದೂ ಕೂಡ ಕರೆಯಲಾಗುತ್ತದೆ. ಕುಂದಾಪುರ ತಾಲ್ಲೋಕಿಗೆ ಸೇರಿದ ಕೊಲ್ಲೂರು ಸೌಪರ್ಣಿಕಾ ನದಿಯ ತೀರದಲ್ಲಿದೆ. ಕೋಲ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಇದಕ್ಕೆ ಹಿಂದೆ ಕೋಲಾಪುರ ಎಂದು ಹೆಸರಿತ್ತು.ದಟ್ಟಾರಣ್ಯದ ನಡುವೆ ಈ ಪ್ರದೇಶವು ಇತ್ತು.  ಹಿಂದೆ ಕಂಹಾಹುರ ಎನ್ನುವ ರಾಕ್ಷಸನ ಕಾಟವನ್ನು ತಾಳಲಾರದೆ ಋಷಿಗಳು ಕೋಲ ಮಹರ್ಷಿಗಳ ನೇತೃತ್ವದಲ್ಲಿ ಆದಿಪರ ಶಕ್ತಿಯ ಮೊರೆಯನ್ನು ಹೊಕ್ಕರು. ಕಂಹಾಹಾರನಾದರೂ ಈಶ್ವರನ ಪರಮ ಭಕ್ತನ ಪರಮೇಶ್ವರನನ್ನು ಒಲಿಸಿ ಅನೇಕ ವರಗಳನ್ನು ಪಡೆಯಲು ಸನ್ನದ್ದನಾದನು. ಅದರ ಅಪಾಯವನ್ನು ಅರಿತ ದೇವಿಯು ಅವನನ್ನು ಮೂಕನನ್ನಾಗಿಸಿದಳು. ಮೂಕಾಸುರ ಎಂದು ಹೆಸರಾದ ಅವನು ಕೊಲ್ಲೂರಿನಲ್ಲಿಯೇ ನೆಲೆ ನಿಂತು ಋಷಿಗಳನ್ನು ಹಿಂಸಿಸುವುದನ್ನು ಮುಂದುವರೆಸಿದನು. ಆಗ ದೇವಿಯು ಶಕ್ತಿರೂಪದಲ್ಲಿ ಅವನನ್ನು ವಧಿಸಿ ಕೋಲಾಪುರದಲ್ಲಿಯೇ ನೆಲೆ ನಿಂತಳು. ಆದಿಶಂಕರರು ತಮ್ಮ ದೇಶ ಪರ್ಯಟನೆಯ ಸಂದರ್ಭದಲ್ಲಿ ಇಲ್ಲಿ ತಪಸ್ಸನ್ನು ಆಚರಿಸಿದ್ದರೆಂದೂ ಶ್ರೀಚಕ್ರದ ಮೇಲೆ ದೇವಿಯನ್ನು ಸ್ಥಾಪಿಸಿ ಇದನ್ನು ಶಕ್ತಿಪೀಠವನ್ನಾಗಿಸಿದರೆಂದೂ ನಂಬಿಕೆ ಇದೆ. ಈಗಿರುವ ಶಿಲಾ ದೇವಾಲಯವನ್ನು ಬಂಕಿ ಅರಸರ ವಂಶದ ಸಂಕಣ್ಣ ಸಾಮಂತರ ಅಳಿಯ ವೆಂಕಣ್ಣ ಸಾಮಂತನು ಕಟ್ಟಿಸಿದನು. ಕೆಳದಿಯ ಅರಸರ ಕಾಲದಲ್ಲಿ ದೇಗುಲಕ್ಕೆ ಮಹತ್ವವು ಲಭಿಸಿತು. ಈ ದೇವಿಗಾಗಿ ಅವರು ದೊಡ್ಡ ಪ್ರಮಾಣದ ಉಂಬಳಿನ್ನು ನೀಡಿದ್ದಲ್ಲದೆ ಅನೇಕ ವಜ್ರ, ಬಂಗಾರ ಹಾಗೂ ರತ್ನಾಭರಣಗಳನ್ನು ನೀಡಿದ್ದರು.

ಮೂಕಾಂಬಿಕೆಯ ಸನ್ನಿಧಿ: ಮೂಕಾಂಬಿಕಾ ದೇವಿಯು ಪದ್ಮಾಸನದಲ್ಲಿ ತಪೋನಿರತ ಭಂಗಿಯಲ್ಲಿ ನೆಲೆಸಿದ್ದಾಳೆ. ದೇವಿಯ ದೀರ್ಘವಾದ ಸುವರ್ಣಮಾಲೆಯಲ್ಲಿ ಹಾಗೂ ಮುಕುಟದಲ್ಲಿ ಅಪರೂಪದ ಪಚ್ಚೆರತ್ನಗಳು ಶೋಭಿಸುತ್ತಿವೆ. ಶ್ರೀಚಕ್ರದ ಮೇಲೆ ದೇವಿಯು ನೆಲೆಸಿರುವದಲ್ಲದೆ ವೀರಭದ್ರಸ್ವಾಮಿಯ ಸನ್ನಿಧಾನವೂ ಇರುವುದರಿಂದ ಭಕ್ತರು ಕೋರಿದ ವರ ಸಿದ್ದಿಸುವುದು ಎನ್ನುವುದು ನಂಬಿಕೆ. ಹೀಗಾಗಿ ಕೊಲ್ಲೂರನ್ನು ಸಿದ್ದಕ್ಷೇತ್ರ ಎಂದೂ ಕೂಡ ಕರೆಯುತ್ತಾರೆ.

ಆವರಣ ಮೂರ್ತಿಗಳು: ದೇವಸ್ಥಾನದ ಗೋಪುರದ ಮೇಲೆ ಸಣ್ಣ ಕಳಸವಿದೆ. ಮುಖ್ಯದ್ವಾರದ ಎಡ-ಬಲಗಳಲ್ಲಿ ಜಗುಲಿಗಳಿವೆ. ಆ ದ್ವಾರವನ್ನು ದಾಟಿ ಒಳ ಬಂದರೆ ಅಲ್ಲಿಯೂ ಎರಡೂ ದ್ವಾರದ ಎರಡು ಪಕ್ಕದಲ್ಲಿಯೂ ವಿಶಾಲವಾದ ಜಗುಲಿಗಳಿವೆ. ಅಲ್ಲಿ ವೀರಭದ್ರ ಸ್ವಾಮಿಯ ಸನ್ನಿಧಿಯನ್ನೂ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಹಾಗೂ ಸರಸ್ವತಿ ಮಂಟಪವನ್ನು ನೋಡುತ್ತೇವೆ. ಈ ಮಂಟಪದಲ್ಲಿಯೇ ಮೂಕಾಂಬಿಕೆ ಉತ್ಸವ ಮೂರ್ತಿಯನ್ನು ನೆಲೆಗೊಳಿಸಲಾಗುತ್ತದೆ. ಅಂಗಳದ ಎಡಭಾಗಕ್ಕೆ ನಾಲ್ಕು ಲಿಂಗಗಳಿವೆ. ಮೂಕಾಂಬಿಕೆಯ ಪ್ರತಿಮೆ ಸ್ವಲ್ಪ ಎತ್ತರದ ಪೀಠದ ಮೇಲೆ ಪದ್ಮಾಸನಸ್ಥವಾಗಿದ್ದು ಈ ಬಿಂಬದ ಎದುರಿನಲ್ಲಿ ಸ್ವಯಂಭೂಜ್ಯಾತಿರ್ಲಿಂಗವಿದ್ದು ಪೂಜೆ, ನೈವೇದ್ಯ, ಅಭಿಷೇಕಗಳೆಲ್ಲವೂ ಈ ಲಿಂಗಕ್ಕೇ ನಡೆಯುತ್ತದೆ. ದೇವಳದ ಶಯನೋತ್ಸವ ಮಂಟಪದ ಬಳಿ ಇರುವ ಗಣಪತಿ ದೇಗುಲವೂ ಪ್ರಮಖವಾದದ್ದು. ಇಲ್ಲಿಯೇ ಹತ್ತು ಕೈಗಳನ್ನು ಹೊಂದಿದೆ ಗಣಪತಿಯ ಮೂರ್ತಿ ಕೂಡ ಇದೆ.

ನಂಬಿಕೆಗಳು: ಈ ದೇವಸ್ಥಾನಕ್ಕೆ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ ಎನ್ನುವ ನಂಬಿಕೆ ಇದೆ. ಇಲ್ಲಿನ ಸರಸ್ವತಿ ಮಂಟಪದಲ್ಲಿ ಅಕ್ಷರಾಭ್ಯಾಸ ಮಾಡಿದರೆ ಮಕ್ಕಳ ಶಿಕ್ಷಣ ಉತ್ತಮವಾಗುತ್ತದೆ ಎನ್ನುವ ನಂಬಿಕೆ ಇದೆ. ಪದ್ಮಭೂಷಣ ಡಾ.ಕೆ.ಜೆ.ಯೇಸುದಾಸ್ ಪ್ರತಿ ವರ್ಷದ ತಮ್ಮ ಹುಟ್ಟು ಹಬ್ಬವನ್ನು ದೇವಿಯ ಸನ್ನಿಧಿಯಲ್ಲಿ ಆಚರಿಸಿ ಕೊಳ್ಳುತ್ತಾರೆ. ಹೀಗಾಗಿ ಸಂಗೀತ ಕಲಿಯುವವರು ಇಲ್ಲಿನ ಪ್ರಥಮ ಅಭ್ಯಾಸ ಮಾಡುವುದು ಶ್ರೇಷ್ಠ ಎಂಬ ನಂಬಿಕೆ ಕೂಡ ಇದೆ.