ದೇವರ ದಾಸಿಮಯ್ಯ ಜಯಂತಿ

ಶಿವನಿಗೆ ಬಟ್ಟೆಯಿತ್ತ ನೇಯ್ಗೆಕಾರ

ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ. ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿ ಸಿರುವರು. ಆದರೆ ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ವೃತ್ತಿಯಲ್ಲಿ ನೇಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ.

ವಚನಕಾರ

ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.

ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ-ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು.

ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಇವರ ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ.

ಪ್ರಶ್ನೆಯಿಂದ ಪರೀಕ್ಷಿಸುವ ವ್ಯಕಿತ್ವ

ದೇವರ ದಾಸಿಮಯ್ಯನವರು ಮುದನೂರಿನ ಸಮೀಪದಲ್ಲಿರುವ ಶೈವ ಕೇಂದ್ರವಾದ ಶ್ರೀಶೈಲದಲ್ಲಿ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ಅಪಾರ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಕೂಡಾ ಪಡೆದು ಜ್ಞಾನವಂತರಾದರು. ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಲ್ಲ. ಪ್ರಖರ ವೈಚಾರಿಕ ನೆಲೆಗಟ್ಟಿನ ಅಸದೃಶ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ದಾಸಿಮಯ್ಯನವರು ದುಗ್ಗಳೆಯನ್ನು ವಿವಾಹವಾದರು.