ಸೌರ ಯುಗಾದಿ

ಕ್ಷಣ, ದಿನ, ಪಕ್ಷ, ಮಾಸ, ವರ್ಷ, ಯುಗಗಳೆಲ್ಲದರ ಆರಂಭವೇ ಸೂರ್ಯ ನಾರಾಯಣ. ಅವನೇ ಜಗದ ಚಕ್ಷು. ಅಂದರೆ ಜಗತ್ತನ್ನು ಮೊದಲು ನೋಡುವವನು. ಅದಕ್ಕಾಗಿಯೇ ವಿಷ್ಣುವು ಎಲ್ಲದರ ಆರಂಭಕಾಲ ವಾಗಿರುತ್ತಾನೆ.

ಯುಗಾದಿ ಎಂಬುದು ಒಂದು ಕಾಲ ಚಕ್ರ. ರವಿಯ ಒಂದು ಬಿಂದುವಿನಿಂದ ಮತ್ತೆ ಅದೇ ಬಿಂದುವಿನ ಸಂಚಾರಕಾಲದ ಅವಧಿಯನ್ನು ವರ್ಷ ಎಂದು ಲೆಕ್ಕಾಚಾರ ಮಾಡಿದ್ದಾರೆ. ಇದರಲ್ಲಿ ಚಾಂದ್ರಮಾನ ಮತ್ತು ಸೌರಮಾನಗಳೆಂಬ ಎರಡು ಗಣನೆಗಳಿವೆ. ಚಾಂದ್ರಮಾನ ಪ್ರಕಾರ ಚೈತ್ರಶುಕ್ಲ ಪ್ರಥಮವನ್ನು ಯುಗಾದಿಯಾಗಿ ಆಚರಿಸಿದರೆ, ಮೇಷ ಸಂಕ್ರಮಣವನ್ನು ಸೌರಯುಗಾದಿಯಾಗಿ ಆಚರಿಸುತ್ತಾರೆ. ತಿಥಿ ರೀತಿಯಾಗಿ ಪಿತೃಮಾನವೂ, ದಿನ ರೀತಿಯಾಗಿ ದೇವಮಾನವೂ ಆಚರಿಸಲ್ಪಡುತ್ತದೆ.

ಈಗ ಶ್ವೇತ ವರಾಹ ಕಲ್ಪದ ವೈವಸ್ವತ ಮನ್ವಂತರದ 28 ನೇ ಮಹಾಯುಗದ ಕಲಿಯುಗದ ಪ್ರಥಮ ಚರಣದಲ್ಲಿ ನಾವಿದ್ದೇವೆ.

ಜೀವಿತದಲ್ಲಿ ನಾವೇನು ಪಾಪಗಳನ್ನು ಮಾಡಿರುತ್ತೇವೆಯೋ ಅದು ಮುಂದೆ (ಪ್ರತೀ ಯುಗಾದಿಯ ನಂತರ) ಮರುಕಳಿಸದಂತೆ ಪ್ರಜ್ಞೆಯನ್ನು ಕರುಣಿಸು ಎಂದು ಶಾಸ್ತ್ರಜ್ಞರು ತಿಳಿಸಿದಂತೆ ಯುಗಾದಿಯ ಆಚರಣೆ ಮಾಡಿದಾಗ ನಮಗೆ ಮಾತ್ರವಲ್ಲ ಇಡೀ ಜಗತ್ತಿಗೂ ಶುದ್ಧಿಯಾಗುತ್ತದೆ. ಇದುವೇ ಯುಗಾದಿಯ ಯುಗಾವರ್ತನೆಯ ಆಚರಣೆಯ ಮುಖ್ಯ ಸಂದೇಶವಾಗಿರುತ್ತದೆ.