ಮೃಗವಧೆ ಮಲ್ಲಿಕಾರ್ಜುನ ರಥ

ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ

ಮೃಗವಧೆ (ಮಿಗವನ್ನು ವಧಿಸಿದ ಸ್ಥಳ) ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ೨೫ ಕಿ ಮಿ ಹಾಗೂ ಕೊಪ್ಪದಿಂದ ೨೨ ಕಿಮಿ ದೂರದಲ್ಲಿದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ.

ಐತಿಹ್ಯ

ವನವಾಸ ಸಂದರ್ಭದಲ್ಲಿ ಶ್ರೀ ರಾಮನು, ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ್ದು ಈ ಸ್ಥಳದಲ್ಲೆಂದು ಪ್ರತೀತಿ. ಇದರಿಂದುಂಟಾದ ಬ್ರಹ್ಮಹತ್ಯ ದೋಷದಿಂದ ಪಾರಾಗಲು ಶ್ರೀರಾಮನು ಮಾರೀಚನ ದೇಹದಲ್ಲಿದ್ದ ಬಾಣವನ್ನು ಹೊರತೆಗೆದು ಬ್ರಾಹ್ಮೀ ನದಿಯ ದಂಡೆಯ ಮೇಲೆ ಶಿವಲಿಂಗವೊಂದನ್ನು ಸ್ಥಾಪಿಸಿದನು. ಇದೇ ಇಂದಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ. ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಈಶ್ವರನ ಸಮಸ್ತ ಗಣಗಳು ನೆಲೆಸಿವೆ ಎನ್ನುತ್ತಾರೆ.

ನಿರ್ಮಾಣ

ಈ ದೇವಾಲಯವನ್ನು ಚಾಲುಕ್ಯರ ಅರಸನಾದ ತ್ರಿಭುವನಮಲ್ಲನು ೧೦೬೦ ರಲ್ಲಿ ನಿರ್ಮಿಸಿದನು. ಕಾಲಾಂತರದಲ್ಲಿ ಕೆಳದಿ ಸೋಮಶೇಖರನ ಕಾಲದಲ್ಲಿ ದೇವಾಲಯವನ್ನು ಪುನರುತ್ಥಾನ ಮಾಡಲಾಯಿತು. ನಾಲ್ಕೂವರೆ ಅಡಿ ಎತ್ತರದ ಶಿವಲಿಂಗ ಇಲ್ಲಿನ ವೈಶಿಷ್ಟ್ಯ.

ಇಲ್ಲಿನ ಇತರ ಪ್ರಮುಖ ದೇವಾಲಯಗಳು

ಶನೈಶ್ಚರ ದೇವಾಲಯ

ಈ ದೇವಸ್ಥಾನದಲ್ಲಿರುವ ಶನೈಶ್ಚರ ದೇವಾಲಯವೂ ಮಲೆನಾಡಿನಲ್ಲಿ ಪ್ರಸಿದ್ಧಿ ಹೊಂದಿದೆ ಹಾಗೂ ಅತಿ ಹೆಚ್ಚು ಭಕ್ತರು ಈ ದೇವರ ದರ್ಶನಕ್ಕೆ ಬರುತ್ತಾರೆ. ಇದಲ್ಲದೇ ಈ ದೇವಸ್ಥಾನದಲ್ಲಿ ಶಂಕರೇಶ್ವರ, ಉಗ್ರ ನರಸಿಂಹ, ಆಂಜನೇಯ ಮತ್ತು ಪಂಜುರ್ಲಿ ದೇವಾಲಯಗಳೂ ಇವೆ.