ಬಕ್ರೀದ್

ಬಕ್ರೀದ್ ತ್ಯಾಗ ಬಲಿದಾನದ ಸಂಕೇತವಾಗಿರುವ ಆಚರಣೆ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಈದ್ ಉಲ್ ಅಧಾ ಎಂಬ ಹೆಸರೂ ಇದೆ.

ಮುಸ್ಲಿಮರಿಗೆ ಒಟ್ಟು ಐದು ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯಗಳಿವೆ.

1. ಶಹಾದ (ಏಕದೇವನಲ್ಲಿ ನಂಬಿಕೆ) 

2. ನಮಾಜ್ (ನಿತ್ಯವೂ ಐದು ಹೊತ್ತಿನ ಪ್ರಾರ್ಥನೆ)

3. ರೋಜಾ (ರಂಜಾನ್ ಮಾಸದ ಮೂವತ್ತು ದಿನ ಉಪವಾಸ)

4. ಜಕಾತ್ (ಕಡ್ಡಾಯ ದಾನ)

5. ಹಜ್ (ಉಳ್ಳವರು ಜೀವನದಲ್ಲಿ ಕನಿಷ್ಠ ಒಂದು ಬಾರಿ ನಿರ್ವಹಿಸಬೇಕಾದ ಹಜ್ ಯಾತ್ರೆ).

ಇವುಗಳಲ್ಲಿ ಪ್ರಥಮ ಮೂರು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ನಾಲ್ಕನೆಯದು ಆಯಾ ವ್ಯಕ್ತಿಯ ಆರ್ಥಿಕ ಸಾಮರ್ಥ್ಯವನ್ನು ಅನುಸರಿಸಿದೆ. ಐದನೆಯದು ಹಜ್ ಯಾತ್ರೆ ಹಲವು ನಿಯಮಗಳ ನಿಬಂಧನೆಗೆ ಒಳ ಪಟ್ಟಿದೆ.

ನಿಮಗೆ ಅಮೂಲ್ಯ ಎನಿಸಿದ್ದನ್ನು ತ್ಯಾಗ ಮಾಡುವಂತಿರಬೇಕು ಎಂಬುದೇ ಬಕ್ರೀದ್ ಹಬ್ಬದ ಮುಖ್ಯ ಸಾರ ಈ ಹಬ್ಬದ ಮುಖ್ಯವಾದ ಅಂಶವೆಂದರೆ ಸುಮಾರು ಸಾವಿರದ ನಾನೂರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ ಇಸ್ಮಾಯೀಲ್ ರನ್ನೂ ದೇವರ ಇಚ್ಚೆಯಂತೆ ತ್ಯಾಗ ಮಾಡುತ್ತಾರೆ. ಪ್ರವಾದಿಯವರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಕುರಿಯೊಂದನ್ನು ಬಲಿಪಡೆದುಕೊಳ್ಳುತ್ತಾರೆ. ಅರಬಿ ಭಾಷೆಯಲ್ಲಿ ಬಕ್ರ್ ಎಂದರೆ ಕುರಿ, ಈದ್ ಅಂದರೆ ಹಬ್ಬ. ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದೇ ಬಕ್ರೀದ್ ಆಗಿದೆ.

ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದೇ ಈ ಹಬ್ಬದ ಸೂಚನೆಯಾಗಿದೆ. ಇದನ್ನೇ ತ್ಯಾಗ ಅಥವಾ ಕುರ್ಬಾನಿ ಎಂದು ಕರೆಯಲಾಗುತ್ತದೆ. ಬಕ್ರೀದ್ ಹಬ್ಬ ಒಟ್ಟು ಮೂರು ದಿನಗಳಾಗಿ ಆಚರಿಸಲಾಗುತ್ತದೆ. ಮೊದಲ ದಿನ ಅರಫಾತ್ (ಉಪವಾಸ) ಎರಡನೆಯ ದಿನ ಈದ್ (ಹಬ್ಬದ ದಿನ) ಮತ್ತು ಮೂರನೆಯ ದಿನ (ಜಮಾರತ್) ಅಥವಾ ಸೈತಾನನಿಗೆ ಕಲ್ಲು ಹೊಡೆಯುವ ದಿನ. ಮಕ್ಕಾದಲ್ಲಿ ಹಜ್ ಯಾತ್ರಿಕರಿಗೆ ಮುಂದಿನ ಮೂರು ದಿನಗಳು ಪವಿತ್ರವಾಗಿವೆ.

ಆದರೆ ಉಳಿದವರಿಗೆ ಮೂರು ದಿನಗಳಿಗೆ ಹಬ್ಬ ಸೀಮಿತವಾಗಿದೆ. ಸೈತಾನನಿಗೆ ಕಲ್ಲು ಹೊಡೆಯುವುದು ಕೇವಲ ಸಾಂಕೇತಿಕವಾಗಿದ್ದು ನಮ್ಮ ಮನದೊಳಗಣ ಸೈತಾನನನ್ನು ಕೊಲ್ಲುವುದೇ ಇದರ ನಿಜವಾದ ಅರ್ಥವಾಗಿದೆ. ಈ ಮೂರೂ ದಿನಗಳಲ್ಲಿ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ದೇವರಲ್ಲಿ ಬೇಡಿಕೊಂಡ ಯಾವುದೇ ಪ್ರಾರ್ಥನೆ ಈಡೇರುತ್ತದೆ ಎಂಬ ನಂಬಿಕೆ ಇದೆ.