ಮೇಲುಕೋಟೆ ವೈರಮುಡಿ ಉತ್ಸವ

ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಭೂ ವೈಕುಂಠ ಎಂಬ ಖ್ಯಾತಿಯ ಮಂಡ್ಯ ಜಿಲ್ಲೆ ಮೇಲುಕೋಟೆ ಹಲವು ಹತ್ತು ಪುರಾಣೇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ. ಯಾದವಾದ್ರಿ, ನಾರಾಯಣಾದ್ರಿ, ಯತಿಶೈಲ, ತಿರುನಾರಾಯಣಪುರ, ಯದುಗಿರಿ, ದಕ್ಷಿಣ ಬದರಿ ಕ್ಷೇತ್ರ. ಹೀಗೆ ಹಲವಾರು ಹೆಸರುಗಳೂ ಇದಕ್ಕಿವೆ. ಇದು ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು (ಇನ್ನುಳಿದವು ಶ್ರೀರಂಗಂ, ತಿರುಪತಿ, ಕಂಚಿ).

ಇಂಥ ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹತ್ತು ದಿನ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಇದು ಕರ್ನಾಟಕದ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದು. ಅಷ್ಟೇ ಅಲ್ಲ, ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ಇಲ್ಲಿನ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಅತ್ಯದ್ಭುತ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ. ಒಂದು ರೀತಿ ಆಭರಣಗಳ ಹೆಸರಿನಲ್ಲಿ ನಡೆಯುವ ವೈರಮುಡಿ ಉತ್ಸವವೇ ಹಾಗೆ; ಬಹು ವೈಭವೋಪೇತ, ಹಾಗಾಗಿ ಇದು ಜಗತ್ಪ್ರಸಿದ್ಧ.

ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣವಾದ ಒಂದು ಕಿರೀಟ. ಆದರೆ ಅಂತಿಂಥದ್ದಲ್ಲ, ದೈವಶಕ್ತಿಯ ಮಹಾಮಹಿಮೆಯ ಕಿರೀಟವಿದು. ಇದರ ಹಿಂದೊಂದು ಪೌರಾಣಿಕ ಕಥೆಯುಂಟು. ಒಮ್ಮೆ ವಿಷ್ಣು ಭಕ್ತ ಪ್ರಹ್ಲಾದನ ಮಗ ವಿರೋಚನ ಈ ವೈರಮುಡಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ. ವಿಷಯ ತಿಳಿದ ವಿಷ್ಣುವಿನ ವಾಹನನಾದ ವೈನತೇಯ (ಗರುಡ) ವೀರೋಚನನೊಡನೆ ಯುದ್ಧ ಮಾಡಿ ಗೆದ್ದು ವೈರಮುಡಿಯೊಡನೆ ಶರವೇಗದಲ್ಲಿ ಆಕಾಶ ಮಾರ್ಗವಾಗಿ ಬರುವಾಗ ಇದ್ದಕ್ಕಿದ್ದಂತೆ ವೇಗ ಕಡಿಮೆಯಾಗುತ್ತದೆ. ಈ ಸ್ಥಳ ಯಾವುದು ಎಂದು ಗಮನಿಸಿದಾಗ ಅದು ಮಥುರಾ ನಗರವಾಗಿರುತ್ತದೆ. ಅಲ್ಲಿ ವೈನತೇಯನು ಭಗವಾನ್ ಕೃಷ್ಣನಿಗೆ ವೈರಮುಡಿಯನ್ನು ಅರ್ಪಿಸುತ್ತಾನೆ. ಆದರೆ ಶ್ರೀ ಕೃಷ್ಣನ ಶಿರದಲ್ಲಿ ವೈರಮುಡಿ ಸರಿಯಾಗಿ ಕೂರುವುದಿಲ್ಲ. ಆಗ ಕೃಷ್ಣನೇ ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಒಪ್ಪಿಸಬೇಕೆಂದು ವೈನತೇಯನಿಗೆ ಹೇಳುತ್ತಾನೆ. ಅದರಂತೆ ವೈನತೇಯ ಮೇಲುಕೋಟೆಗೆ ಬಂದು ವೈರಮುಡಿಯನ್ನು ಚೆಲುವನಾರಾಯಣಸ್ವಾಮಿಯ ಶಿರಕ್ಕೆ ಸಮರ್ಪಿಸಿದಾಗ ಅದು ಬಹು ಭವ್ಯವಾಗಿ ಅಲಂಕೃತಗೊಳ್ಳುತ್ತದೆ. ಇದರಿಂದ ಅತ್ಯಂತ ಹರ್ಷಗೊಂಡ ವೈನತೇಯನು ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಭಕ್ತರಿಗೆ ಪರಮಾತ್ಮನ ದಿವ್ಯ ದರ್ಶನವನ್ನು ಮಾಡಿಸಿದನಂತೆ.

ಮತ್ತೊಂದು ಐತಿಹ್ಯದ ಪ್ರಕಾರ ದ್ವಾರಕೆಯಿಂದ ತಿರುನಾರಾಯಣಪುರಕ್ಕೆ ಸ್ವತಃ ಶ್ರೀಕೃಷ್ಣನೇ ಬಂದು ತನಗೆ ಅರ್ಪಿತವಾದ ವೈರಮುಡಿಯನ್ನು ಚೆಲುವರಾಯನಿಗೆ ಅರ್ಪಿಸುತ್ತಾನೆ. ಹೀಗೆ ಅಂದು ವೈನತೇಯ (ಗರುಡ) ಚೆಲುವನಾರಾಯಣಸ್ವಾಮಿಯನ್ನು ಹೆಗಲ ಮೇಲಿರಿಸಿಕೊಂಡು ಉತ್ಸವ ಮಾಡಿದ ಕಾರಣ ಇಂದಿಗೂ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಗರುಡ ವಾಹನದ ಮೇಲೆಯೇ ಜರುಗುತ್ತದೆ. ಇದೇ ಬ್ರಹ್ಮೋತ್ಸವ. ಸಮದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ.

ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.

ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಭಕ್ತರ ಪಾಲಿಗಂತೂ ಅದು ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು ೯ ಗಂಟೆಯಿಂದ ಬೆಳಗಿನ ಜಾವ ೩ ಗಂಟೆವರೆಗೂ ಜರುಗುತ್ತದೆ.

ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಒಂದು ಕಾಲದಲ್ಲಿ ಈ ವಜ್ರಮಯ ವೈರಮುಡಿ ದೆಹಲಿ ಸುಲ್ತಾನರ ಕೈವಶವಾಗಿತ್ತು. ಆಚಾರ್ಯ ಶ್ರೀರಾಮಾನುಜರೇ ಇದನ್ನು ದೆಹಲಿಯಿಂದ ಮೂಲ ವಿಗ್ರಹದೊಂದಿಗೆ ಇಲ್ಲಿಗೆ ತಂದರೆಂದು ಹೇಳಲಾಗುತ್ತದೆ. ನಂತರ ವೈರಮುಡಿಯನ್ನು ಮೈಸೂರು ಅರಸರ ವಶಕ್ಕೆ ಒಪ್ಪಿಸಲಾಗಿತ್ತು. ಮುಂದೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇದನ್ನು ಇಡುತ್ತ ಬರಲಾಗುತ್ತಿದೆ. ಆದಿಶೇಷನ ಅವತಾರಿ ಆಚಾರ್ಯ ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.

ಗಾಳಿ ಆಂಜನೇಯ ದೇವಸ್ಥಾನ

ಗಾಳಿ ಆಂಜನೇಯ ದೇವಸ್ಥಾನ ಬೆಂಗಳೂರು ನಗರದ ಅತಿ ಶ್ರೇಷ್ಠ ಹಾಗೂ ಪವಿತ್ರವಾದ ಸ್ಥಳ. ಇದು ಬೆಂಗಳೂರಿನ ಹಳೆಯ ದೇವಸ್ಥಾನಗಳಲ್ಲಿ ಒಂದು. ಈ ದೇವಾಲಯವನ್ನು ಮೊದಲು ದಿಗಂಬರ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು. ಗಾಳಿ ಆಂಜನೇಯ ದೇವಸ್ಥಾನ ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದ ಬಳಿ ಇದೆ. ಈ ದೇವಾಲಯದ ದೇವರು ತುಂಬಾ ಶಕ್ತಿಶಾಲಿಯಾಗಿರುವುದರಿಂದ ತಮ್ಮ ಎಲ್ಲಾ ಕೋರಿಕೆಗಳು ಈಡೇರುತ್ತವೆ ಎಂದು ಅನೇಕ ಭಕ್ತರು ನಂಬುತ್ತಾರೆ. ಇಡೀ ವರ್ಷ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ ಹಾಗೂ ಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಗಾಳಿ ಆಂಜನೇಯ ದೇವರ ಆಶೀರ್ವಾದ ಪಡೆಯಲು ಮತ್ತು ತಮ್ಮ ಜೀವನದ ತೊಂದರೆಗಳನ್ನು ನಿವಾರಿಸಿಕೊಳ್ಳಲು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆಂಜನೇಯನ ಆಶೀರ್ವಾದ ಪಡೆಯಲು ಭಕ್ತರು ಬೇರೆ ಬೇರೆ ಊರುಗಳು ಹಾಗೂ ರಾಷ್ಟ್ರಗಳಿಂದೆಲ್ಲಾ ಬರುತ್ತಾರೆ.

ಇತಿಹಾಸ
ಈ ದೇವಾಲಯವನ್ನು ೧೪೨೫ ರಲ್ಲಿ ನಿರ್ಮಿಸಲಾಗಿದ್ದು ಇದು ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ವೃಷಭಾವತಿ ಮತ್ತು ಪಶ್ಚಿಮಾವತಿ ನದಿಗಳ ಸಂಗಮವಾದದ್ದರಿಂದ ವ್ಯಾಸರಾಜನು ಇಲ್ಲಿ ಪ್ರತಿಮೆಯನ್ನು ಸ್ಥಾಪಿಸಿದನೆಂದು ಪುರಾಣ ಹೇಳುತ್ತದೆ. ಇಲ್ಲಿರುವ ಆಂಜನೇಯನ ವಿಗ್ರಹವನ್ನು ಹಿಂದೂ ಸಂತ ಶ್ರೀ ವ್ಯಾಸರಾಜ ಸ್ಥಾಪಿಸಿದ್ದಾರೆ. ಅವರು ೭೩೨ ಹನುಮಂತನ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ, ಇವುಗಳಲ್ಲಿ ಗಾಳಿ ಆಂಜನೇಯ ದೇವಸ್ಥಾನ ಕೂದ ಒಂದು. ಬೆಂಗಳೂರು ನಗರ ಉದಿಸುವ ಮುನ್ನ ಸ್ವಾಮಿಯ ಮೂರ್ತಿ ಬಯಲಿನಲ್ಲಿ ಇದ್ದ ಕಾರಣ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಗಾಳಿ ಎಂದರೆ ದುಷ್ಟಶಕ್ತಿ ಎಂದರ್ಥ. ದುಷ್ಟಶಕ್ತಿಗಳ ಅಧಿಪತಿಯಾದ ರಾವಣನ ಪುತ್ರ ಅಕ್ಷಾಸುರನನ್ನು ಮೆಟ್ಟಿ ನಿಂತಿದ್ದರಿಂದ ಈ ಹೆಸರು ಬಂದಿದೆ.

ದೇವಾಲಯದ ವಿವರ
ದೇವಾಲಯದ ಪೂಜಾ ಮೂರ್ತಿಯ ಶಿರದ ಎರಡೂ ಬದಿಗಳಲ್ಲಿ ಶಂಖ ಚಕ್ರಗಳಿವೆ. ಸಾಮಾನ್ಯವಾಗಿ ಬಹುತೇಕ ಆಂಜನೇಯನ ವಿಗ್ರಹಗಳ ಕೈಯಲ್ಲಿ ಗದೆ ಇರುತ್ತದೆ ಆದರೆ ಇಲ್ಲಿ ಪದ್ಮಕಮಲ ಇರುವುದು ಮತ್ತೊಂದು ವಿಶೇಷತೆಯಾಗಿದೆ. ಆಂಜನೇಯನ ಬಹುತೇಕ ದೇಗುಲಗಳಲ್ಲಿ ಮೂರ್ತಿಯ ಮುಖಕ್ಕೆ ಸಿಂಧೂರ ಲೇಪಿಸಲಾಗುತ್ತದೆ ಆದರೆ ಇಲ್ಲಿ ಪ್ರತಿ ಗುರುವಾರ ಸ್ವಾಮಿಯ ಇಡೀ ದೇಹಕ್ಕೆ ಸಿಂಧೂರವನ್ನು ಲೇಪಿಸಿ ಪೂಜೆ ಮಾಡಲಾಗುತ್ತದೆ. ಪ್ರತಿ ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ನಡೆಯುತ್ತದೆ.

ಗಾಳಿ ಆಂಜನೇಯ ದೇವಸ್ಥಾನ ಎತ್ತರದ ಗೋಪುರವನ್ನು ಹೊಂದಿದ್ದು ಇಲ್ಲಿ ದೇವರು ಪಶ್ಚಿಮಕ್ಕೆ ಮುಖಮಾಡಿ ಶ್ರೀರಾಮನ ಪರಿವಾರವನ್ನು ಕಾಣುತ್ತಿದ್ದಾನೆ. ಇಲ್ಲಿ ಪವಿತ್ರ ದಾರವನ್ನು ಭಕ್ತರಿಗೆ ಪ್ರಸಾದ ಎಂದು ನೀಡಲಾಗುತ್ತದೆ. ಇಲ್ಲಿ ಭಗವಂತನ ಬಾಲದ ಕೊನೆಯಲ್ಲಿ ಒಂದು ಗಂಟೆಯನ್ನು ಕಟ್ಟಿದ್ದು ಇದು ಶ್ರೀ ವ್ಯಾಸರಾಜರ ಶಾಂತಿ ಶೈಲಿಯನ್ನು ಸೂಚಿಸುತ್ತದೆ. ಆಂಜನೇಯನ ವಿಗ್ರಹದ ಎಡಗೈ ಸೊಂಟದ ಮೇಲೆ ವಿಶ್ರಾಂತಿ ಪಡೆಯುತ್ತಾ ಹೂವನ್ನು ಹಿಡಿದಿದೆ ಹಾಗೂ ಬಲಗೈಯಲ್ಲಿ ಅಭಯ ಮುದ್ರೆಯನ್ನು ಹಿಡಿದು ತನ್ನ ಎಲ್ಲಾ ಭಕ್ತರಿಗೆ ಆಶೀರ್ವಾದ ನೀಡುತ್ತಿದೆ.
ದೇವಾಲಯದ ಮಹತ್ವ
ಗಾಳಿ ಆಂಜನೇಯ ದೇವಾಲಯದ ಅನನ್ಯತೆಯೆಂದರೆ ರಥ ಯಾತ್ರೆ. ಇದು ಕಳೆದ ೧೨೦ ವರ್ಷಗಳಿಂದ ನಡೆಯುತ್ತಿದೆ. ಈ ಸಮಯದಲ್ಲಿ ಬಹಳಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ೧೩೫ ವರ್ಷಗಳಿಂದ ಶ್ರೀ ರಾಮ ನವಮಿ ಸಂದರ್ಭದಲ್ಲಿ ೯ ದಿನಗಳ ಕಾಲ ಶ್ರೀ ಪಾಂಚರಾತ್ರಾಗಮ ಬ್ರಹ್ಮರಥೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ. ಹನುಮ ಜಯಂತಿ ಹಾಗೂ ಭೀಮನ ಅಮಾವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಅಭಿಷೇಕ, ಪೂಜೆ, ಸಂಗೀತ, ಭಜನೆ, ಪ್ರಸಾದ ವಿಸ್ತರಣೆ ಮುಂತಾದವು ಇರುತ್ತದೆ. ಅಗಸ್ಟ್ ತಿಂಗಳಲ್ಲಿ ಈ ದೇವಸ್ಥಾನದ ದೇವರಿಗೆ ಬೆಣ್ಣೆ ಅಲಂಕಾರವನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ದೈತ್ಯಾಕಾರದ ವಿಗ್ರಹವನ್ನು ಬೆಣ್ಣೆಯಿಂದ ಅಲಂಕರಿಸಲಾಗುತ್ತದೆ. ಬೆಣ್ಣೆಯನ್ನು ಸಾವಿರಾರು ಭಕ್ತರು ದಾನ ಮಾಡುತ್ತಾರೆ. ಹನುಮಾನ್ ಜಯಂತಿ ಸಮಯದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಕೋತಿಗಳಿಗೆ ಹಣ್ಣುಗಳನ್ನು ನೀಡಲಾಗುತ್ತದೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಶ್ರೀ ವೇಣುಗೋಪಾಲಸ್ವಾಮಿ, ಶ್ರೀರಾಮ, ಗಣಪತಿ ಮತ್ತು ನವಗ್ರಹ ದೇವಾಲಯಗಳಿವೆ. ಈ ದೇವಾಲಯದಲ್ಲಿ ಸಾಕಷ್ಟು ರಾಜಕಾರಣಿ ಭಕ್ತರಿದ್ದಾರೆ. ಭಕ್ತರು ಅವರ ಕೆಲಸದ ಕ್ಷೇತ್ರಗಳಲ್ಲಿ ತಮ್ಮ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಮಕ್ಕಳಿಗೆ ಕಾಯಿಲೆಗಳನ್ನು ಗುಣಪಡಿಸಲು ಇಲ್ಲಿ ಭೇಟಿನೀಡುತ್ತಾರೆ.

ಹಬ್ಬ/ಉತ್ಸವಗಳು
ಈ ದೇವಾಲಯದ ಪ್ರಸಿದ್ಧ ಹಬ್ಬವೆಂದರೆ ಕಾರು ಉತ್ಸವ. ವರ್ಷಕ್ಕೊಮ್ಮೆ ನಡೆಯುವ ಅತ್ಯಂತ ಪ್ರಸಿದ್ಧ ಕಾರು ಉತ್ಸವವನ್ನು ಆಚರಿಸುವ ದೇವಾಲಯ ಇದಾಗಿದೆ. ಇಲ್ಲಿ ಭಕ್ತರು ಆಂಜನೇಯ ಆಶೀರ್ವಾದ ಪಡೆಯುವುದಕ್ಕಾಗಿ ತಮ್ಮ ಹೊಸ ಕಾರುಗಳನ್ನು ಪೂಜೆ ಮಾಡುತ್ತಾರೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ಹತ್ತಿರ ಇಟ್ಟು ಪೂಜೆ ಮಾಡಿದ ಅರಿಶಿನದ ದಾರವನ್ನು ಪ್ರಸಾದವಾಗಿ ನೀಡುತ್ತಾರೆ. ಈ ದೇವಸ್ಥಾನದಲ್ಲಿ ಮಕ್ಕಳು ಏನಾದರೂ ಕೆಟ್ಟದ್ದನ್ನು ನೋಡಿ ಹೆದರಿ ಕೊಂಡಿದ್ದರೆ ದೇವರ ಅಭಿಷೇಕದ ನೀರನ್ನು ಮಕ್ಕಳ ಮುಖದ ಮೇಲೆ ಬೇವಿನ ಎಲೆಗಳಿಂದ ನೀರನ್ನು ಹಾಕಿ ದೇವರ ಅರ್ಚನೆಯ ಕುಂಕುಮವನ್ನು ಹಣೆಯ ಮೇಲೆ ಇಡುತ್ತಾರೆ. ದೇವರ ಹತ್ತಿರ ಇಟ್ಟಿ ಪೂಜೆ ಮಾಡಿದ ನಿಂಬೆಹಣ್ಣು ಸಹ ನೀಡುತ್ತಾರೆ. ಇದರಿಂದ ಮನೆಯಲ್ಲಿ ಯಾವುದೇ ಕಷ್ಟ ತೊಂದರೆಗಳಿದ್ದರೆ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮಕ್ಕಳ ಬೇಡಿಕೆ ಕೋರಿಕೆಗಳನ್ನು‌ ಆಂಜನೇಯ ಬೇಗ ನೆರವೇರಿಸುತ್ತಾನೆ ಎಂದು ಭಕ್ತರು ನಂಬಿದ್ದಾರೆ. ಇಲ್ಲಿ ಪ್ರತೀ ಶನಿವಾರ ದೇವರಿಗೆ ವಡೆ ಅಲ೦ಕಾರ ಮಾಡುತ್ತಾರೆ.

ಈ ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಗ್ಗೆ ೬ ರಿಂದ ರಾತ್ರಿ ೮.೩೦ ರವರೆಗೆ ತೆರೆದಿರುತ್ತದೆ. ಇದು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಿಂದ ಕೆಲವೇ ನಿಮಿಷಗಳ ದೂರದಲ್ಲಿದೆ. ಮೆಟ್ರೋ ರೈಲು ಈ ಸ್ಥಳವನ್ನು ತಲುಪಲು ಉತ್ತಮ ಪ್ರಯಾಣ ಮಾರ್ಗವಾಗಿದೆ.