ನಾರಾಯಣ ಗುರು ಜಯಂತಿ

ನಾರಾಯಣ ಗುರುಗಳು  ಹುಟ್ಟಿದ್ದು ಸರ್ವಧರ್ಮದ, ಬಹು ಸಂಸ್ಕೃತಿಯ ನೆಲೆಯಾದ ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದ ಚೆಂಬಿಳಂತಿ ಎಂಬ ಗ್ರಾಮದಲ್ಲಿ.  1854ನೇ ಇಸವಿ ಶ್ರಾವಣ ಮಾಸದ ಶತಭಿಷ ನಕ್ಷತ್ರದಲ್ಲಿ ಓಣಂ ಹಬ್ಬದ ಮೂರನೇ ದಿನದಂದು ತಂದೆ ಮಾದನ್‌ ಆಶಾನ್‌ ತಾಯಿ ಕುಟ್ಟಿ ಅಮ್ಮಾಳ್‌. ಈಳವ ಜಾತಿಗೆ ಸೇರಿದ ಕುಟುಂಬ. ಮಗುವಿಗೆ ನಾರಾಯಣ ಎಂಬ ಹೆಸರಿಟ್ಟು ಪ್ರೀತಿಯಿಂದ ನಾಣುಎಂದು ಕರೆದರು. ನಾಣು ಹುಟ್ಟಿದ್ದು ಬ್ರಿಟೀಷ್‌ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ. ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಆಚರಣೆಗಳ ಅಮಾನುಷ ಪರಿಸ್ಥಿತಿ. ಆರಂಭದ ಗುರುಗಳಾದ ಮೂತ್ತ ಪಿಳ್ಳೆ ಆಶಾನ್‌, ಸುಂದರ ಪಿಳ್ಳೆ ಆಶಾನ್‌, ಇವರಿಂದ ಮಳೆಯಾಳ ಸಂಸ್ಕೃತ ಅಭ್ಯಾಸ, ಪುರಾಣ ಜ್ಞಾನ, ರಾಮಾಯಣ, ಭಾರತ, ಭಾಗವತವೇ ಮೊದಲಾದ ಧರ್ಮಗ್ರಂಥಗಳ ಜ್ಞಾನ ದೊರೆಯಿತು. ನಾಣುವಿಗೆ ದೂರದ ಕರುನಾಗಪಳ್ಳಿಯ ಚೆರುವನ್ನಾರ್‌ ಮನೆತನದ ಶ್ರೀರಾಮನ್‌ ಆಶಾನ್‌ ಎಂಬ ಗುರುಗಳಲ್ಲಿ ಶಿಕ್ಷ ಣ ದೊರೆಯಿತು. ಊಟ ನಿದ್ರೆಗಳ ಪರಿವೆಯಿಲ್ಲದೆ ಕಲಿತ ನಾಣು ಅಧ್ಯಾತ್ಮ, ಆಯುರ್ವೇದ ಜ್ಯೋತಿಷ್ಯ ಶಾಸ್ತ್ರ, ವೇದ ಉಪನಿಷತ್ತು, 18 ಪುರಾಣಗಳ ಕಲಿಕೆಯೊಂದಿಗೆ ತನ್ನ ಪ್ರಯತ್ನದಲ್ಲಿ ಕಾವ್ಯ, ನಾಟಕ, ವ್ಯಾಕರಣ, ಅಲಂಕಾರ, ತರ್ಕಶಾಸ್ತ್ರ, ವಿದ್ಯೆಗಳನ್ನು ಸಿದ್ಧಿಸಿ ನಾಣು ಚಟ್ಟಾಂಬಿಆಗಿ ಆಧ್ಯಾತ್ಮ ಗುರುವಾದರು. ಸಮಾಜದೊಂದಿಗೆ ಬದುಕಿನ ಪಾಠ ಕಲಿತು ಬ್ರಹ್ಮಜ್ಞಾನವನ್ನು ಪಡೆದು, ನಾರಾಯಣ ಗುರುವಾದರು.

ಸಾಮಾಜಿಕ ಸಮಸ್ಯೆಗಳೇ ತುಂಬಿಕೊಂಡಿದ್ದ ಆ ಕಾಲದಲ್ಲಿ ನಾರಾಯಣ ಗುರುಗಳ ಪ್ರಭಾವ ಕರಾವಳಿಯಲ್ಲೂ ಆಯಿತು. ಮಂಗಳೂರಿನ ಕುದ್ರೋಳಿ ದೇವಸ್ಥಾನ, ಸೇರಿದಂತೆ ಅಲ್ಲಲ್ಲಿ ನಾರಾಯಣ ಗುರು ಮಂದಿರಗಳು ನಿರ್ಮಾಣವಾಗಲು ಕಾರಣವಾಯಿತು. 1908ನೇ ಇಸವಿಯಲ್ಲಿ ಮಂಗಳೂರಿಗೆ ಬಂದ ನಾರಾಯಣ ಗುರುಗಳು ಸಾಹುಕಾರ ಕೊರಗಪ್ಪರ ನೇತೃತ್ವದಲ್ಲಿ ಕುದ್ರೋಳಿಯಲ್ಲಿ ದೇವಸ್ಥಾನಕ್ಕೆ ಸ್ಥಳ ಆಯ್ಕೆ ಮಾಡಿದರು. ಗೋಕರ್ಣ ಕ್ಷೇತ್ರದಲ್ಲಿ ಬಿಲ್ಲವ ಜನಾಂಗದ ಓರ್ವಹಿರಿಯರಿಗೆ ಆದ ಸ್ವಾಭಿಮಾನದ ನೋವು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸ್ಥಾಪನೆಗೆ ಕಾರಣವಾಯಿತು ಎನ್ನುವುದು ಐತಿಹ್ಯ. 1928ನೇ ಇಸವಿ ಸೆಪ್ಟಂಬರ್ .20ರಂದು ಕೇರಳದ ವರ್ಕುಳದ ಶಿವಗಿರಿಯಲ್ಲಿ ಲೋಕದ ಬೆಳಕು ಸಮಾಧಿಯಾಗಿ ಬೆಳಗಿತು. ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ನಾರಾಯಣ ಗುರುಗಳು ಯೋಗನಿದ್ರೆಗೆ ಜಾರಿದ ದಿನ.