ಮಳೂರು ಅಪ್ರಮೇಯ ಸುದರ್ಶನ ಯಾಗ

ಶ್ರೀ ಅಪ್ರಮೇಯ ಸ್ವಾಮಿ / ನವನೀತ ಕೃಷ್ಣ ದೇವಾಲಯ

ಈ ದೇವಾಲಯದ ಪ್ರಧಾನ ದೇವತೆ ಶ್ರೀ ಅಪ್ರಮೇಯ ಸ್ವಾಮಿ. ಆದರೆ, ನವನೀತ ಕೃಷ್ಣ ದೇವಾಲಯವೆಂದು ಇದು ಹೆಚ್ಚು ಜನಪ್ರಿಯವಾಗಿದೆ. ಮೇಲಿನ ಎರಡು ಕೈಗಳಲ್ಲಿ ಶಂಖು ಚಕ್ರವನ್ನು ಮತ್ತು ಕೆಳಕೈಗಳಲ್ಲಿ ಪದ್ಮವನ್ನು ಹಿಡಿದು ನಿಂತಿರುವ ಭಂಗಿ. ಶ್ರೀರಾಮನು ಇಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದನು ಮತ್ತು ಇಲ್ಲಿ ಭಗವಂತನನ್ನು ಪೂಜಿಸಿದ್ದನು ಮತ್ತು ಶ್ರೀ ಸ್ವಾಮಿಯನ್ನು ಶ್ರೀ ರಾಮಪ್ರಿಯ ಸ್ವಾಮಿ ಎಂದು ಸಹ ಕರೆಯುತ್ತಾರೆ ಎಂದು ನಂಬಲಾಗಿದೆ. ದೇವಾಲಯದ ಹೊರಭಾಗದಲ್ಲಿ ‘ಪುರಂದರದಾಸ ಮಂಟಪ’ ಎಂಬ ಹೆಸರಿನ ಮಂಟಪವಿದೆ. ‘ಆಡಿಸಿದಳೆಶೋದೆ ಜಗದೋದ್ಧಾರನ, ಜಗದೋದ್ಧಾರನಾ ಮಗನೆಂದು ತಿಳಿಯುತಾ.....’ ಪುರಾತನವಾದ ಈ ದೇವಾಲಯದಲ್ಲಿರುವ ಮುದ್ದಾದ ಕೃಷ್ಣನ ಮೂರ್ತಿಯನ್ನು ಕಂಡು ಭಾವಪರವಶರಾಗಿ ಪುರಂದರ ದಾಸರು ಈ ಕೀರ್ತನೆಯ ರಚನೆ ಮಾಡಿದರಂತೆ.

ಈ ದೇವಾಲಯವು ಹಲವಾರು ಪವಾಡಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ನವನೀತ ಕೃಷ್ಣನ ಆರಾಧನೆ ಮಾಡುವುದರಿಂದ 'ಪುತ್ರ ದೋಷ' ನಿವಾರಣೆಯಾಗುವುದು ಎಂಬ ನಂಬಿಕೆ ಇದೆ.